ರಾಜ್ಯದಲ್ಲಿ 28 ಕ್ಷೇತ್ರಗಳನ್ನ ಗೆಲ್ಲಬೇಕೆಂಬ ಮಹದಾಸೆಯಲ್ಲಿರೋ ಬಿಜೆಪಿಗೆ, ತೆಲುಗು ಸ್ಟಾರ್ ಬಲ ಸಿಕ್ಕಿದೆ. ಜಾತಿವಾರು ಜೊತೆಗೆ ಈಗ ಭಾಷಾವಾರು ಮತ ಸೆಳೆಯಲು ಬಿಜೆಪಿ ಬಿಗ್ ಪ್ಲಾನ್ ಮಾಡಿದೆ. ಕರ್ನಾಟಕದಲ್ಲಿರುವ ತೆಲುಗು ಭಾಷಿಕರ ಮತಗಳನ್ನು ಸೆಳೆಯಲು ಬಿಜೆಪಿ, ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಮೊರೆ ಹೋಗಿದೆ. ರಾಜಕಾರಣಿಯೂ ಆಗಿರುವ ಪವನ್ ಕಲ್ಯಾಣ್, ಜನಸೇನಾ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಕೂಡ ಆಗಿದ್ದಾರೆ. ಅಲ್ಲದೆ, ಇತ್ತೀಚಿಗಷ್ಟೇ ಎನ್ಡಿಎ ಜತೆ ಕೈಜೋಡಿಸಿದ್ದಾರೆ. ಪವನ್ ಕಲ್ಯಾಣ್ ನೇಮ್ & ಫೇಮ್ ಬಳಸಿಕೊಳ್ಳಲು ಮುಂದಾಗಿರೋ ಬಿಜೆಪಿ, ತೆಲುಗು ಭಾಷಿಕರು ಹೆಚ್ಚಿರುವ ಪ್ರದೇಶಗಳಲ್ಲಿ ಬಿಜೆಪಿ ಪರ ಪವನ್ ಕಲ್ಯಾಣ್ ಪ್ರಚಾರ ನಡೆಸಲಿದ್ದಾರೆ.
ರಾಜ್ಯದಲ್ಲಿ ತೆಲುಗು ಪ್ರಾಬಲ್ಯವಿರೋ ರಾಯಚೂರು, ಬಳ್ಳಾರಿ, ಚಿಕ್ಕಬಳ್ಳಾಪುರ, ಕೋಲಾರ ಲೋಕಸಭಾ ಕ್ಷೇತ್ರದಲ್ಲಿಯೂ ಪವನ್ ಕಲ್ಯಾಣ್ ಕ್ಯಾಂಪೇನ್ ಮಾಡಲಿದ್ದಾರೆ. ಈಗಾಗಲೇ ರಾಯಚೂರು, ಬಳ್ಳಾರಿಯಲ್ಲಿ ಪವನ್ ಕಲ್ಯಾಣ್ ರೋಡ್ ಶೋಗೆ ದಿನಾಂಕ ಮತ್ತು ರೂಟ್ ಮ್ಯಾಪ್ ಸಿದ್ಧವಾಗಿದೆ. ತೆಲಂಗಾಣ ಹಾಗೂ ಆಂಧ್ರ ಪ್ರದೇಶದ ಗಡಿಯಲ್ಲಿರುವ ರಾಯಚೂರಿಗೆ ಏಪ್ರಿಲ್ 17ರಂದು ಪವನ್ ಕಲ್ಯಾಣ್ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11 ರಿಂದ 12 ಗಂಟೆವರೆಗೆ ರಾಯಚೂರಿನ ಗಂಜ್ ಸರ್ಕಲ್ನಿಂದ ಆರ್ಟಿಒ ಕಚೇರಿವರೆಗೆ ಪವನ್ ಕಲ್ಯಾಣ್ ರೋಡ್ ಶೋ ನಡೆಸಲಿದ್ದಾರೆ. ನಂತರ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರ ಪರ ಪವನ್ ಕಲ್ಯಾಣ್ ಭರ್ಜರಿ ಪ್ರಚಾರ ಮಾಡಲಿದ್ದಾರೆ. ಎಪ್ರಿಲ್ 17 ರಂದು ಮಧ್ಯಾಹ್ನ 12:05 ಕ್ಕೆ ಬಳ್ಳಾರಿಗೆ ಆಗಮಿಸಲಿರುವ ಪವನ್ ಕಲ್ಯಾಣ್, ನಗರದ ರಾಯಲ್ ಸರ್ಕಲ್ ಮೂಲಕ ಎಪಿಎಂಸಿ ಮಾರುಕಟ್ಟೆ ವರಗೆ ಭರ್ಜರಿ ರೋಡ್ ಶೋ ಮಾಡಲಿದ್ದಾರೆ. ಬಳ್ಳಾರಿ ನಗರ ಮತ್ತು ಗ್ರಾಮೀಣ ಕ್ಷೇತ್ರಗಳಲ್ಲಿರುವ ತೆಲುಗು ಭಾಷಿಕರ ಮತಗಳನ್ನು ಸೆಳೆಯಲು ಬಿಜೆಪಿ ಪವನ್ ಕಲ್ಯಾಣ್ ಅವರನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಮುಂದಾಗಿದೆ.
Lorem ipsum dolor sit amet, consectetur adipisicing elit, sed do eiusmod tempor
Jangan Tampilkan Lagi Ya, Saya Mau !